About Me

My photo
Bangalore, Karnataka, India
goodhearty@gmail.com

Thursday, June 20, 2013

ಹೀಗೊಂದು ಕಥಾ ಚಿಂತನೆ ಭಾಗ ೨

            


                                              (ಚಿತ್ರ ಕೃಪೆ ಅಂತರ್ಜಾಲ)


              ನಾನು ಗಾಬರಿಯಿಂದಲೇ ಆಸ್ಪತ್ರೆಗೆ ಓಡಿಹೋದೆ.ಸ್ನೇಹಿತನ ಕಾಲ್ ಬಂದಮೇಲೆ ಒಮ್ಮೆಲೆ ಅವಕ್ಕಾಗಿದ್ದು ನಿಜ.ಆಕೆ ತೀರ ಸೂಕ್ಷ್ಮ ಮನಸಿನವಳು. ನಾವು ಒಡಹುಟ್ಟಿದವರಲ್ಲದೆ ಇದ್ದರು ನಮ್ಮಲ್ಲಿ ಭ್ರಾತ್ವುತ್ವದ ಭಾವನೆ ಬೇರೂರಿತ್ತು. ಒಂದೇ ಆಫೀಸಿನಲ್ಲಿ ಕೆಲಸ ಮಾಡುವುದರಿಂದ ಸಹಜವಾಗಿಯೇ ಕಷ್ಟ ಸುಖ ಗಳನ್ನೂ ಹೇಳಿಕೊಳ್ಳುತ್ತಿದ್ದೆವು.ಪ್ರತಿ ಬಾರಿಯೂ ಒಂದು ವಿಷಯವನ್ನೂ ಮುಂದಿಟ್ಟುಕೊಂಡು ಚರ್ಚಿಸುತ್ತಿದ್ದೆವು.ಫಿಲ್ಮಿ ದುನಿಯಾ , ಪ್ರೀತಿ ಪ್ರೇಮ,  ದೇಶ ರಾಜಕೀಯ ಹೀಗೆ ಹತ್ತಾರು ವಿಷಯಗಳು ನಮ್ಮ ಕೆಲಸದ ನಡುವಿನ ವಿಷಯವಾಗಿತ್ತು. ಆಕೆಗೆ ಪ್ರಬುದ್ದತೆಗೆ ಮೀರಿದ ವಿವೇಚನೆ, ಆದರು ಹೀಗೇಕೆ ಆಯಿತು? ಒಂದು ವಾರದ ಹಿಂದಷ್ಟೇ ನಿಶ್ಚಿತಾರ್ಥವು ನಡೆದಿತ್ತು. ನಗುನಗುತ್ತಲೇ ಉಂಗರ ಹಾಕಿಕೊಂಡು ನನಗೆ ತೋರಿಸಿದ್ದಳು.ನಾನು ವಾ ಎಂದಿದ್ದೆ .ಆದರೆ,


                       ********** ಎರಡು ತಿಂಗಳ ಹಿಂದೆ ******************


ಆತ ಆಕೆಯನ್ನು ತನಗಿಂತ ಹೆಚ್ಹಾಗಿ ಪ್ರೀತಿಸುತಿದ್ದ.ಆಕೆಯೇ ನನ್ನ ಜೀವನ ಎಂದು ತಿಳಿದಿದ್ದ . ಅದು ಆಕೆಗೆ ತಿಳಿದೇ   ಇತ್ತು .ಆತ ಬಹಳ ಯೋಚಿಸಿದ  ಮೇಲೆ ಒಮ್ಮೆ ಆಕೆಯನ್ನು ಪ್ರೀತಿಸುತ್ತಿರುವುದಾಗಿ ಹೇಳಿದ. ಆಕೆ ಕೂಡಲೇ, ನಾನು ನಿನ್ನನ್ನು  ಪ್ರೀತಿಸುತ್ತಿಲ್ಲ ,ಇದು ಸಾಧ್ಯವಿಲ್ಲ ಎಂದು ಹೇಳಿದಳು.  ಅತ ಇದನ್ನು ಕೇಳಿ ಏನು ಮಾಡಿಕೊಳ್ಳುತ್ತಾನೋ ಎನ್ನುವ ಭಯ ಈಕೆಗೆ.ಆತ ಬಹಳ ಪ್ರೀತಿಸುತ್ತಿರುವುದು ಅವಳಿಗೆ ತಿಳಿಯದ ವಿಷಯವೇನಲ್ಲ. ಆತ ವ್ಯಸನಿ ಆಗಬಹುದು, ಕುಡಿತ ಅಥವಾ ಸಿಗರೇಟಿನ ದಾಸನಾಗಬಹುದು ಎಂದು ಅಂದುಕೊಂಡಿದ್ದಳು.



ಬಹಳ ದಿನಗಳಾದಮೇಲೆ ಆತನನ್ನು  ನೋಡಿದಳು. ಆತ ಹಾಗೆಯೇ ಇದ್ದ. ಖಿನ್ನತೆಗೆ ಒಳಗಾಗಲಿಲ್ಲ. ಇದು ಹೀಗೆ ಸಾಧ್ಯ?    ಆತನ ವರ್ತನೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲಾ.  

      ಸಹಜವಾಗಿಯೇ ಆಕೆ ಆತನನ್ನು ಹೇಗಿದ್ದೀಯ ? ನೀನು ಮೊದಲಿನ ಹಾಗೆ ಗೆಲುವಾಗಿಯೆ ಇರುವೆ.ನನ್ನ ಮಾತಿಗೆ ನೀನು ಎಲ್ಲಿ ಯೇನು ಮಾಡಿಕೊಳ್ಳುವೆಯೋ ಅನ್ನೋ ಭಯವಿತ್ತು ಎನ್ನುವ ಭಾವನೆ ಯನ್ನೂ ವ್ಯಕ್ತಪಡಿಸಿದಾಗ  ಆತ ಈಕೆಯ ಮಾತು ಕೇಳಿ , ಯಾರದೇ ನಿಜವಾದ ಪ್ರೀತಿ ಇನ್ನೊಬ್ಬರಿಗೆ ಸಿಗದಿದ್ದರೆ ಅದು ಇನ್ನೊಬ್ಬರಿಗೆ ಆದ ನಷ್ಟವೇ ಹೊರತು ಪ್ರೀತಿಸಿದವರೀಗಲ್ಲ ಎಂದು ಹೇಳಿ ಹೊರಟು ಹೋದ.

......ಹಾಗೆಯೇ ಭಗವಂತನು ನಮ್ಮನ್ನೆಲ್ಲರನ್ನು ತುಂಬಾ ಪ್ರೀತಿಸುತ್ತಾನೆ., ನಾವು ಅವನನ್ನು ತಿರಸ್ಕರಿಸಿದರೆ ಅವನಿಗಾಗುವ ನಷ್ಟ ಏನು ಅಲ್ಲ ಎಂದು ಗುರುಗಳು  ಟಿವಿ ಯಲ್ಲಿ ಪ್ರವಚನ ನೀಡುವುದನ್ನು ನೋಡಿದೆ. 


 ಗೋಡೆಯ ಗಡಿಯಾರ ಎಂಟು ಗಂಟೆ ತೋರಿಸುತ್ತಿತ್ತು . ಟೈಮ್ ಆಯ್ತು ಅಂದುಕೊಂಡು ಟಿವಿ ಆಫ್ ಮಾಡಿ ಆಫೀಸಿಗೆ ಹೋಗಲು ಬೈಕ್ನ ಚಾವಿ ತಿರುಗಿಸಿದೆ. ಅಮ್ಮ ಸುಮ್ಮನೆ ರೇಗಿಸುವ ರೀತಿಯಲ್ಲಿ ಈವತ್ತು FEB14 ಆಲ್ ದಿ ಬೆಸ್ಟ್ ರಿಸಲ್ಟ್ ಫೋನ್ ಮಾಡಿ ಹೇಳು ಎಂದು ರೇಗಿಸಿದರು. ನಾನು ನಗುತ್ತ ಆಯ್ತಮ್ಮ ಬರ್ತಾ ಸೊಸೆಯನ್ನ ಮನೆಗೆ ಕರೆದುಕೊಂಡು ಬರ್ತೀನಿ ಎಂದು  ಹೇಳಿ ಹೊರಟೆ.... 



ನಾನು ನನ್ನ ಕ್ಯಾಬಿನ್ ನ ಒಳಗೆ ಬಂದೊಡನೆ ಆಕೆಯ ಕೈಯಲ್ಲಿ ಗುಲಾಬಿಯ ಗುಚ್ಹವಿತ್ತು. ಆಕೆಯ ಒದ್ದೆಯಾದ ಕಣ್ಣುಗಳು  ಅದೇ ಗುಚ್ಚವನ್ನು ತದೇಕ ಚಿತ್ತದಿಂದ ನೋಡುತ್ತ ಮರುಗುತ್ತಿತ್ತು. ನಾನು ಆಶ್ಚರ್ಯದಿಂದ,


ಏನಕ್ಕ ಏನ್ ಸಮಾಚಾರ ? ಯಾವ ಫ್ಯಾನ್ ಕೊಟ್ಟ?ನಂಗೆ ವಿಷ್ಯನೇ ಹೇಳಿಲ್ಲ? ಎರಡು ತಿಂಗಳಾದ ಮೇಲೆ ನಿಶ್ಚಿತಾರ್ಥ ಅಂದಿದ್ದೆ.ಅದೇ ಹುಡುಗ ತಂದು ಕೊಟ್ಟನ? ಕೂಲ್ ಎಂದೆ.


ಆಕೆ ನನ್ನ ಮಾತಿಗೆ ಮುಗುಳ ನಗೆ ಬೀರಿ ಹೂ ಗುಚ್ಚವನ್ನು ಡ್ರಾಯೇರ್ನಲ್ಲಿ ಇಟ್ಟಳು.ನನಗು ಅವನೇ ಕೊಟ್ಟ ಎಂದನಿಸಿತು.            ಈತರಹದ  ವಿಷಯಗಳನ್ನೂ ಕೂಡಲೇ ಯಾವ ಹುಡಿಗಿ ಬಾಯಿ ಬಿಡುತ್ತಾಳೆ ಹೇಳಿ? 
ಸುಮ್ಮನೆ ಆಕೆಯ ಮೌನ ಮುರಿಯಲು, ಇವತ್ತು ಬರಿ ಶೋ- ಆಫ ಜಾಸ್ತಿ ಎಂದು ಹೇಳಿದೆ. ಆಕೆ ಸಿಡಿಮಿಡಿದು ನನ್ನ ಕಣ್ಣನ್ನು ದಿಟ್ಟಿಸಿ ನೋಡಿದಳು.ನಾನು ಸುಮ್ಮನಾದೆ.


ಕೆಲವು ಸಮಯದ ನಂತರ ಸುಮ್ಮನೆ ಕುಚೋದ್ಯ ಮಾಡಲು ಮತ್ತೆ ಆಕೆಯನ್ನು ಮಾತಿಗೆಳೆದು,
 ಇದೊಂದು ದಿವಸ ಫೋನಿನಲ್ಲಿ  ಲೊಚುಗುಟ್ಟರೆ ಸಾಕ? ವರ್ಷದ ಎಲ್ಲ ದಿವಸಗಳು ಪ್ರೀತಿಸುವುದು ಬೇಡವೇ ? ಈ ಒಂದು ದಿವಸ ನೀಡಿದ ಉಡುಗೊರೆ ಇಡೀ ವರ್ಷ ಪ್ರೀತಿಯ ಧಾರೆಯಾಗಬಹುದೇ?


(ನನ್ನ ಪ್ರಶ್ನೆ ಆಕೆಯ ಮನಸು ನಾಟಿದಂತೆ, ತಟ್ಟನೆ ಮಾತಿಗಿಳಿದಳು)
ನೀನು ಎಷ್ಟು ಬಾರಿ ಪ್ರೀತಿಸುವವರನ್ನು , ಪ್ರೀತಿಸುತ್ತೇನೆ ಎಂದು ಹೇಳಿದ್ದೀಯ ?ಅದೆಲ್ಲ ಬಿಡು, ನೀನು ನಿನ್ನ ತಾಯಿಯನ್ನು ನೀನು ಎಷ್ಟು ಬಾರಿ ಪ್ರೀತಿಸುತ್ತೇನೆ ಎಂದು ಹೇಳಿದ್ದೀಯ?ನಿನ್ನ ಪ್ರೀತಿ ನಿಜವೇ ಆಗಿರಬಹುದು.ಅದು ಅವರಿಗೆ ತಿಳಿದೇ ಇರಬಹುದು ಒಮ್ಮೆ ಅದನ್ನು ವ್ಯಕ್ತ ಪಡಿಸಿದಲ್ಲಿ ಅವರಿಗೆ ಆಗುವ ಸಂತೋಷ ಅಷ್ಟಿಷ್ಟಲ್ಲ.ಹಾಗಾಗಿಯೇ ಹೀಗೆಲ್ಲ ದಿನಗಳ ಆಚರಣೆ  ಎಂದು ಉತ್ತರ ನೀಡಿದಳು.



ನನ್ನಲ್ಲಿ ಮರು ಮಾತಿರಲಿಲ್ಲ.ಆದರು ಈಗಿನ ಲವ್ ಎಂದರೆ ಅಷ್ಟೇ.ಹುಡುಗಿ ಸ್ವಲ್ಪ ಚೆನ್ನಾಗಿದ್ದರೆ ಸಾಕು ಹುಡುಗನಿಗೆ ಪ್ರೀತಿ ಶುರು ಆಗಿಬಿಡುತ್ತೆ.ಇನ್ನು ಹುಡುಗಿ ಮೊದಲು ನೋಡುವುದೇ ಅವನ ಜೀಬನ್ನು ನಂತರ ಬಾಕಿದು.ಒಂದೇ ಆತ ಅತಿ ಸ್ಪುರದ್ರೂಪಿ ಯಾಗಿರಬೇಕು ಇಲ್ಲ ಅಂದರೆ  ಅಂಬಾನಿ ಮಗನಾಗಿರಬೇಕು .ಅಷ್ಟೇ ಈ ಪ್ರೀತಿ ಎಂದು ನಾನು ಸುಮ್ಮನೆ ಮಾತನ್ನು ಗಾಳಿಯಲ್ಲಿ ತೇಲಿಸಿದೆ. 


  ಅದನ್ನ ಕೇಳಿದ ಆಕೆ ಅತಿ ಗಂಭೀರದಿಂದ,ಇಂದು ನಿನ್ನ ಮಾತಿನ ದಾಟಿ ಬೇಕೆಂದೇ ಬದಲಾದಂತಿದೆ.ಹುಡುಗರ ವಿಷಯ ನಾನು ಹೇಳಲಾರೆ,ಆದರೆ ಹುಡುಗಿಯರಾದ ನಾವು...       ಹುಡುಗ  ಸ್ತಿಥಿವಂತ  ಆಗಿರಬೇಕು ಎಂದು ಅಪೀಕ್ಷಿಸುವುದು ತಪ್ಪೇ?        ಬರಿ ಪ್ರೀತಿಯಿಂದ ಹೊಟ್ಟೆ ತುಂಬುವುದಿಲ್ಲ. ಮುಂದೆ ಸಂಸಾರ ದೊಡ್ದದಾದಮೇಲೆ ಅವನ ಜೀಬೆ ಎಲ್ಲರ ಬಾಳು.ಅಷ್ಟು ಮುಂದಾಲೋಚನೆ ಮಾಡುವುದನ್ನೇ ನೀವು ತಪ್ಪಾಗಿ ತಿಳಿಯುತ್ತೀರಿ.ಎಲ್ಲ ಹುಡುಗಿಯರ ಯೋಚನೆ ಹೀಗೆ ಎಂದು ವಾದಿಸಲಾರೆ ಆದರೆ ನಮನ್ನು ಯಾರು ಹೆಚ್ಚು ಕೇರ್ ತೆಗೆದುಕೊಳ್ಳುತ್ತಾರೋ ಅಂತವರನ್ನು ಪ್ರೀತಿಸದೆ ಇರಲಾಗುವುದೇ? ಆಗ ಆಸ್ತಿ ಜಾತಿ ನಮ್ಮ ಬುದ್ದಿಗೆ ಬರದ ವಿಷಯ.                             ಒಬ್ಬ ನನಗೋಸ್ಕರ ಇದ್ದಾನೆ ಎನ್ನುವುದು ಅಷ್ಟೇ ನನಗೆ ಬೇಕಾಗಿರುವುದು.ಹಾಗಿದ್ದಾಗ ಮಾತ್ರ ಹಿಂದೂ ಮುಂದು ನೋಡುವುದಿಲ್ಲ ಎಂದಳು.


(ಆಕೆಯ ಮಾತು ಸರಿ ಎಂದು ತಿಳಿದಿತ್ತು.ನಾನು ತುಟಿ ನಗೆ ಬೀರಿ)

ಅಬ್ಬ ಅಂತು ಮೌನ ಮುರಿದೆ.ಹಾ..

ಎಲ್ಲ ಹುಡುಗರು ಬಹುತೇಕ ಒಮ್ಮೆಲೆ ನೋಟಕ್ಕೆ ಬೀಳುವುದುಂಟು.ಆದರೆ ಅದೆಲ್ಲ  ಪ್ರೀತಿ ಎಂದು ಹೇಳಲಾಗದು.ನನ್ನ ವಿಚಾರದಲ್ಲಿ ಹುಡುಗಿ ನೋಡಲು ಹೇಗಿದ್ದಾಳೆ ಎನ್ನುವುದು ಒಂದು ವರ್ಷವಾದ ಮೇಲೆ ಅರ್ಥಹೀನವಾಗಿಬಿಡುತ್ತೆ ಎಲ್ಲ ಹುಡುಗಿಯಲ್ಲೂ ಅವಳನ್ನೇ ಕಾಣಬೇಕು ಹಾಗಿದ್ದಲ್ಲಿ ಈಜಲು  ಅರ್ಹರು ಅನಿಸುತ್ತದೆ.

ಒಮ್ಮೆ ಮನಸಿಗೆ ಅನಿಸಿದಮೇಲೆ ಮುಗಿಯಿತು.ಅನುಕೂಲಕ್ಕೆ ತಕ್ಕಂತೆ ಬದಲಾಯಿಸುವುದು ಸರಿಯಲ್ಲ ಅಷ್ಟೇ.


ಬರುವವಳು ಮನೆ ಮತ್ತು ಮನ ಎರಡನ್ನು ಬೆಳಗಿದರೆ ಸಾಕು ಎಂದೆ.


ಆಹಾ,ಎಂತಹ  ಮಾತು.ನಿನ್ನ ಕೈ ಹಿಡಿಯುವವಳು ಅದೃಷ್ಟ ಮಾಡಿದ್ದಾಳೆ ಎಂದು ರೇಗಿಸುವ ರೀತಿಯಲ್ಲಿ ಮಾತನಾಡಿದಳು.


(ನನಗೆ ಇದ್ದಕಿದ್ದ ಹಾಗೆ ಹತ್ತನೇ ಮಹಡಿಗೆ ಹಾರಿ  ಹೋದ  ಭಾವ , ಕಾಲರ್ ಸರಿ ಮಾಡಿಕೊಳ್ಳುತ್ತಿದ್ದೆ)


ಆದರೆ ಆಕೆ ಕ್ಷಣ ಮಾತ್ರದಲ್ಲ್ಲಿ ಮೌನಕ್ಕೆ ಶರಣಾದಳು.ಕಣ್ಣು ಮತ್ತೆ ಒದ್ದೆ ಆಗುತಿತ್ತು. ಏನೋ ಗಂಭೀರವಾಗಿ ತನ್ನನ್ನು ತಾನೇ ಮರೆತು ಯೋಚಿಸುತ್ತಿದ್ದಳು.ಹುಡಿಗಿಯರ ಮನಸು ಹೀಗೆ ಎಂದು ಹೇಳುವುದು ಕಷ್ಟ ಏಕೆಂದರೆ ಅದು ಅವರಿಗೇ ಅರ್ಥವಾಗುವುದಿಲ್ಲ ಎಂದು ಸ್ನೇಹಿತರೊಬ್ಬರು ಹೇಳಿದ ಮಾತು ನೆನಪಾಯಿತು.ಈಗ ಮತ್ತೆ ವಿಷಯವನ್ನೂ ಕೆದುಕುವುದು ಸರಿಯಲ್ಲ ಎಂದು ನಾನು ನನ್ನ ಕಂಪ್ಯೂಟರ್ ನ ಮುಂದೆ ಕುಳಿತು ಯೋಚಿಸುತ್ತಿದ್ದೆ.

ಆಕೆ ಕೂಡಲೇ ಅಲ್ಲಿಂದ ಎದ್ದು ಮುಖ ತೊಳೆದು ಬಂದು ಕುಳಿತಳು.ಆಕೆ ಗೊಂಚಲಿಂದ ಹೂವುಗಳನ್ನು ಒಂದೊಂದಾಗಿ ಕಿತ್ತಿ ವಾನಿಟಿ ಬ್ಯಾಗ್ ಗೆ ಹಾಕಿದಳು.ನನಗೆ ಆಕೆ ಯಾಕೆ ಹಾಗೆ ಮಾಡುತ್ತಿದ್ದಾಳೆ ಎಂದು ತಿಳಿಯಲಿಲ್ಲ.


ಇಡೀ ಹೂಗೊಂಚಲನ್ನು ಮನೆಗೆ ತೆಗೆದುಕೊಂಡು ಹೋಗಬಹುದಲ್ಲ?                                                ಮನೆಯಲ್ಲೂ ನಿಮ್ಮ ಅಪ್ಪ ಅಮ್ಮ ನೋಡಿ ಖುಷಿ  ಪಡಬಹುದು.

ಅದನ್ನು ಕೇಳಿದ ಆಕೆ, ಹತಾಶೆಯಿಂದ ಕಂಬನಿ ಮಿಡಿದು ಹೇಳಿದಳು,ಇದನ್ನು ನನಗೆ ಮದುವೆ  ಆಗುವ  ಹುಡುಗ ಕೊಟ್ಟಿದ್ದರೆ  ಯಾವ ಮಹತ್ವ ಇರುತ್ತಿರಲಿಲ್ಲ, ಇದು ನಾನು ಬಹಳ ವರ್ಷಗಳಿಂದ ಪ್ರೀತಿಸುತ್ತಿರುವ  ಬೇರೆ ಹುಡುಗ ಕೊಟ್ಟಿದ್ದು ಎಂದು ಹೇಳಿದಳು.

(ನನಗೆ ಒಮ್ಮಲೇ ಶಾಕ್ ಹೊಡೆದಂತಾಯಿತು) 


ನನ್ನನ್ನು ಮುಂದೇನು ಕೇಳಬೇಡ,ಯಾರಿಗೂ ಏನನ್ನು ಹೇಳಬೇಡ ಎಂದು ಬೇಡಿದಳು.ನನಗೇನು ತೋಚದಂತಾಯಿತು.ಆಕೆ ಮಾತು ಮುಂದುವರಿಸುತ್ತಾ ,ಇದು ಆಗದ ಮಾತು ಜಾತಿ,ಆಸ್ತಿಯಂತ ದೊಡ್ಡ ದೊಡ್ಡ ಗೋಡೆಗಳನ್ನೂ ದಾಟುವ ಶಕ್ತಿಯಾಗಲಿ ಅಥವಾ ಅದನ್ನು ಒಡೆಯುವ ಸ್ತಿತಿಯಾಗಲಿ  ನನ್ನಲಿಲ್ಲ ಎಂದು ಹೇಳುತ್ತ ಬಿಕ್ಕಿ ಅಳಲು ಶುರು ಮಾಡಿದಳು. ಆಕೆಯಾದರೂ ದುಃಖವನ್ನೂ  ಎಷ್ಟು ಹೊತ್ತೆಂದು ಅದುಮಿ ಇಡಲು ಸಾದ್ಯ?  ಆ ದಿನದ  ಮಾತು ಮತ್ತೆ ಅವಳ ಪರಿಸ್ತಿತಿಯನ್ನು ಅವಲೋಕಿಸಿದೆ.  ಮಾತೆ ಬಾರದಂತಾಯಿತು, ಮನಸು ಕಸಿವಿಸಿಗೊಂಡಿತು.
                                    


                              ************ ಈಗ ******************


ಆಸ್ಪತ್ರೆಯ ಕುರ್ಚಿಯ ಮೇಲೆ ಕುಳಿತು ಹಳೆಯದನೆಲ್ಲ ನೆನಪು ಮಾಡಿಕೊಳ್ಳುತಿದ್ದೆ. ಸಂಜೆ ಐದು ಗಂಟೆಯ ಮೇಲೆ ಹೊರಗಿನ ಜನರಿಗೆ ICUನಲ್ಲಿ ಪ್ರವೇಶವಿತ್ತು.ಆಕೆ ಬಹಳ ಬುದ್ದಿವಂತೆ, ಎಲ್ಲದಕ್ಕೂ ಮೀರಿಡ  ವಿವೇಚನೆ ಉಳ್ಳವಳು.ಸರಿ ತಪ್ಪು ಗಳನ್ನೂ ಅರಿತು ನಡೆಯುವವಳು.ಹಾಗಿದ್ದರು ಇಂದು ಹೀಗೆ ಸ್ವಯಂ ಸಾವನ್ನು ತನ್ನದಾಗಿಸಲು ಹೊರಟಿದ್ದಾಳೆ?! 


ಫಿಲಂ,ಕಥೆಯಲ್ಲಿ ನೋಡಿ ಕೇಳಿದ್ದೆ, ಹೀಗೆ ನಿಜ ಜೀವನದಲ್ಲೂ ಆಗುವುದು ಎಂದು ಕಲ್ಪಿಸಿರಲಿಲ್ಲ.

ಪ್ರೀತಿಯೇ ಹಾಗೆ, ನಮ್ಮ ಇರುವಿಕೆಯನ್ನು ಸಂಪೂರ್ಣವಾಗಿ ಬೇರೆಯವರಲ್ಲಿ ನೋಡುತ್ತೇವೆ,ಆಮೇಲೆ ಆ ಪ್ರೀತಿ ಸಿಗದೇ ಇದ್ದರೆ ನಾವು ನಮ್ಮ ಅಸ್ತಿತ್ವವನ್ನು ಕಳೆದುಕೊಂಡಂತೆ ಭಾವಿಸಿ ತಪ್ಪು ಹೆಜ್ಜೆ ಇಡುತ್ತೇವೆ.ಆದರು ಈಕೆ ಹೀಗೆ ಮಾಡಬಾರದಿತ್ತು ಎಂದು ಸ್ವಗತ ಚಿಂತಿಸಿದೆ.



ಆಕೆಯ ತಂದೆ ನನ್ನನ್ನು ಗುರುತು ಹಿಡಿದರು,ಹತಾಶೆಯ ಕಣ್ಣುಗಳನ್ನು ಒಮ್ಮೆ ಮಿಟಿಕಿಸಿ ತಲೆ ಕೆಳಗೆ ಹಾಕಿದರು.ನಾನು ಯಾವುದೇ ಪ್ರತಿಕ್ರಿಯೆ ನೀಡದೆ ಅವರ ಹಿಂದೆಯೇ  ವಾರ್ಡ್ಒಳಗೆ ಹೋದೆ.ತಾಯಿ ಆಕೆಯ ಪಕ್ಕದಲ್ಲೇ ಕುಳಿತ್ತಿದ್ದರು.ಅವರ ತಂದೆ ಅಲ್ಲಿಯೇ ಇದ್ದ ಪಕ್ಕದ ಕುರ್ಚಿಯಲ್ಲಿ ಮಂಕಾಗಿ ಕುಳಿತರು.ನಾನು ಹತ್ತಿರ ಹೋಗದೆ ದೂರದಲ್ಲೇ ನಿಂತುಕೊಂಡೆ.ಆಕೆ ವಿಷ ಸೇವಿಸಿದ್ದಳು.ಔಷಧಿಯ ಮಂಪರಿನಲ್ಲಿ ನನ್ನನ್ನು ಗುರುತು ಹಿಡಿಯಲಿಲ್ಲ. ಆಕೆ ಹಾಸಿಗೆಯ ಮೇಲೆ, ಕಣ್ಣೀರು ಹಾಕುತ್ತ ತಾಯಿಯ ಕೈ ಹಿಡಿದು ತಪ್ಪಾಯಿತು ಎಂದು ಹಲುಬಿದಳು. 

                                            

ತಂದೆ ತಾಯಿಗೆ ನೋವುಂಟು ಮಾಡಿದೆ,ನನ್ನಿಂದ ಅವರಿಗೆ ಅವಮಾನ ತೊಂದರೆ ಆಗುತ್ತದೆ ಎನ್ನುವ ಭಾವ ಆಕೆಯ ಮನತುಂಬಿತ್ತು. ಮುಂದೆ ಹೀಗೆಂದು ಮಾಡುವುದಿಲ್ಲ ನನ್ನನ್ನು ಕ್ಷಮಿಸಿ ಎಂದು ರೋಧಿಸಲು ಶುರು ಮಾಡಿದಳು.      



ಜೋರಾಗಿ ಮೇಲುಸಿರು ಎಳೆಯುತ್ತ ತಾಯಿಯ   ಕೈ ಹಿಡಿದು ಅರೆ ಪ್ರಜ್ಞೆಯಲ್ಲೇ ನಾನು ನೀವು ನೋಡಿದ ಹುಡುಗನನ್ನೇ ಮದುವೆ ಆಗುತ್ತೇನೆ  ಎಂದು ಭಾಷೆ ಕೊಡುವಂತೆ ಯತ್ನಿಸಿದಳು.ತಾಯಿ ತನ್ನ ಕಣ್ಣನ್ನು  ಸೆರಗಿನಿಂದ ಒರಸುತ್ತಿದ್ದರು.ನನ್ನ ಮನಸು ಕಲುಕಿತು. ಅದನ್ನೆಲ್ಲ ನೋಡಲಾಗದೆ ದುಃಖದಿಂದ  ಯಾರಿಗೂ ಹೇಳದೆ ಕೂಡಲೇ ವಾರ್ಡ್ನಿಂದ ಹೊರಟು ಹೋದೆ. 
                               

                                *******ಒಂದು ವರ್ಷದ ನಂತರ**********



     ಭುವನನ  ಮನೆಗೆ ಹೋಗದೆ ವರ್ಷಗಳೇ ಆಗಿದ್ದವು.(ಹೀಗೊಂದು ಕಥಾ ಚಿಂತನೆ ಭಾಗ ೧ ರ ಪಾತ್ರ-(http://www.publicitygashte.blogspot.in/2012/07/blog-post.html))


ಅವನ ತಂದೆಯ ಮಾತುಗಳು ಮತ್ತೆ ಅವನ ವರ್ತನೆಗೆ ಕೊರಗಿ ಮೃತರಾದ ಅವನ ಅಜ್ಜ, ಎರಡು ನನ್ನ ಮನಸಿನ ಮೇಲೆ ತೀರ ಪರಿಣಾಮ ಬೀರಿತ್ತು.ಅಲ್ಲಿ ಹೋಗುವ  ಮನಸಾಗುತ್ತಿರಲಿಲ್ಲ.ಆದರು ಒಮ್ಮೆ ಅವರನ್ನು ನೋಡಿ ಬರೋಣ ಎಂದು ಅವರ ಮನೆಗೆ ಹೋದೆ.ಭುವನ್ ,ಆತನ ಪತ್ನಿ,ಅವನ ತಂದೆ ತಾಯಿ ಎಲ್ಲರೂ ಇದ್ದರು. ಸಂತಸದಿಂದ ಕೂಡಿದ ಕುಟುಂಬ ಅದಾಗಿತ್ತು ಎಂದನಿಸುತ್ತದೆ. 



ಒಪ್ಪಿಕೊಳ್ಳಲು ಆಗದ ಅವರ ಬೇರೆ ಜಾತಿಯ ಸೊಸೆ ಎಲ್ಲರ ಮನ ಗೆದ್ದಿದಳು.ಅಂದು ಕಂಡ ದುಃಖ,ನೋವು ಚಿಂತೆ ಇಂದು ಕಾಣಲಿಲ್ಲ. ಅವರ ಸೊಸೆಯನ್ನು ಸುತ್ತಲಿನ ಸಮಾಜವು  ಒಪ್ಪದಿದ್ದರೂ,ಒಪ್ಪಿದವರ ಮನಸುಗಳೇ ಅಲ್ಲಿ ಅವರ ಕುಟುಂಬವಾಗಿತ್ತು.ಅವರೊಡನೆ ಬಹಳ ಹೊತ್ತು ಮಾತನಾಡಿದೆ.ಹಳೆಯ ಎಲ್ಲ ಕಹಿ ಘಟನೆಗಳು, ಅದರಿಂದ ಆದ ಗಾಯ ಮಾಸಿ ಹೋಗಿದಂತೆ ಅನಿಸಿತು.ಭುವನ್ ನ ತಂದೆಯ ಮಾತಿನ ದಾಟಿ ಬದಲಾಗಿತ್ತು.ಅವರ ಸೊಸೆಯನ್ನು ಅವರೆ ಹೊಗಳಿದರು! 



ಅಷ್ಟರಲ್ಲಿ ನನಗೆ ಕೂಡಲೇ ಆಸ್ಪತ್ರೆಗೆ ಬರುವಂತೆ ಕರೆ ಬಂತು.ವಿಷಯ ಕೇಳಿ ಹರ್ಷದಿಂದ ಅಲ್ಲಿಂದ ಹೊರಟೆ.


ಯಾವುದೇ ರೀತಿಯ ಪ್ರೀತಿಯಾಗಲಿ,ಅನುಕೂಲಸಿಂಧು ಆದರೆ ಅದು ಎಂದು ಹೆಚ್ಚು ದಿವಸ ಇರುವುದಿಲ್ಲ, ಆದರೆ ನಿಜವಾಗಲು ಪ್ರೀತಿಸುವ ಹೃದಯಗಳು  ಒಬ್ಬರನ್ನೊಬ್ಬರು ಅರ್ಥ ಮಾಡಿ ಕೊಳ್ಳಬೇಕು.ಹಾಗೆ ಇದ್ದಾಗ  ಜೀವನ ನಂದನ ಇಲ್ಲದಿದ್ದರೆ ಬಂಧನ.ಇಂತಹ ಮನಸುಗಳಿಗೆ ಅವರ ಮಧ್ಯ ಇರುವ ಎಂತಹ ಗೋಡೆಗಳನ್ನೂ ಒಡೆಯುವ ಶಕ್ತಿ ಇದೆ ಎಂದನಿಸುತ್ತದೆ.ಹಾಗೆಯೇ ಕಾಲಾಂತರದಲ್ಲಿ ಸಮಾಜ ನಿತ್ತ ನೀರಾಗದೆ ಹೊಸ ಬೆಳವಣಿಗೆಗೆ ಒಗ್ಗಿ ಬಿಡುತ್ತದೆ.



ಆಕೆಯನ್ನು ಒಂದು ವರ್ಷದ ಹಿಂದೆ ಸೇರಿಸಿದ್ದ ಜಾಗ, ಅದೇ ಆಸ್ಪತ್ರೆ.

ಅಂದು ಆಕೆ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ದ್ರಶ್ಯ ಕಣ್ಣು ಮುಂದೆ ಹಾಗೆಯೇ ಇತ್ತು.ಇಂದು  ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.


 ಹೌದು, ಆಕೆಯ ತಂದೆ ಅಂದು ಮಗಳ ಮನಸಿಗೆ ಮರುಗಿ ಅವಳು ಪ್ರೀತಿಸಿದ ಹುಡುಗನಿಗೆ ಕೊಟ್ಟು ಮದುವೆ ಮಾಡಿದ್ದರು.ಅಂದು ಆಕೆಯ ತಂದೆತಾಯಿ ಸಮಾಜದ ಹಂಗಿಗೆ ಬೆಲೆ ಕೊಟ್ಟಿರಲಿಲ್ಲ.ನಮ್ಮೊಳಗಿನ ಕರುಳ ಸಂಭಂದವೇ ಅಂತದ್ದು.ಮರುಗಿದರು ಉಳಿದವರ ಉಳಿತನ್ನೇ ಯೋಚಿಸುವುದು.ಮುಂದೆ ಬಾಳ ಬೇಕಾದವರು ಅವರು ನಾವಲ್ಲ ಎಂದಷ್ಟೇ ಹೇಳಿದ್ದರು.




ನಾನು ಸೀದಾ ಹೋಗಿ ಶುಭ ಕೋರಿದೆ.ಆಕೆಯ ಮುಖ ತಾವರೆಯಂತೆ ಅರಳಿತ್ತು.ಎಲ್ಲರ ಮುಖದಲ್ಲೂ ಸಂತಸದ ಹೊನಲು.ನಾನು ಸುಮ್ಮನೆ ಆಕೆಯನ್ನು ಮೊದಲಿನಂತೆ ರೇಗಿಸಲು,ಅವತ್ತು ನನಗೊಂದು ಮಾತು ಹೇಳಿದ್ರೆ ಇನ್ನು ಸ್ಟ್ರಾಂಗ್ ಆದ ವಿಷವನ್ನೇ ತಂದು ಕೊಡುತ್ತಿದೆ ಎಂದೆ.


ಎಲ್ಲರೂ ಅದನ್ನು ಕೇಳಿ ಗೊಳ್ ಎಂದು ನಕ್ಕಿದರು.

                                                     ---ವೀರಭದ್ರ ಎಸ್ ಹೆಗಡೆ